ಮಂಗಳವಾರ, ಜೂನ್ 30, 2009

ನೀ ನನ್ನೆದುರಿಗಿನ ಅದ್ಭುತ ಕಣೋ

ಇದು ತೀರ ಇತ್ತೀಚಿಗೆ ನಡೆದದ್ದು. ಅಂದರೆ ಮೊನ್ನೆ ಮೊನ್ನೆಯದು. ಆವತ್ತು ನಾನು ನಮ್ಮ ಕಾಲೇಜಿನಲ್ಲಿ ಎಗ್ಸಾಂ ನಡೀತಾ ಇತ್ತು. ನಾನು ಎಗ್ಸಾಂ ಡ್ಯೂಟಿ ನಲ್ಲಿದ್ದೆ. ಸುಮಾರು ಹನ್ನೊಂದುವರೆ ಅಸ್ಟೋತ್ತಿಗೆ ನಂಗೊಂದ್ ಫೋನ್ ಬಂತು. ಫೋನ್ ಮಾಡಿದ್ದು ನಂ ದೇವೇಂದ್ರಪ್ಪ ಸರ್ ಅಂತ. ನಾನ್ ಅವರನ್ನ ದೇವು ಅಂತಲೇ ಪ್ರೀತಿಯಿಂದ, ಆತ್ಮೀಯತೆಯಿಂದ ಕರೆಯುವದು. ಕಾರಣ ನನಗೂ ಅವರಿಗೂ ಸುಮಾರು ಏಳೆಂಟು ವರ್ಷದ ಗೆಳೆತನ ಕಾರಣವಿರಬಹುದು. ಏನೇ ಇರಲಿ, ನನಗೆ ದೇವು ಕರೆ ಮಾಡಿ ಎಲ್ಲಿದಿಯೋ ಅಂದ. ಇಲ್ಲಿ ಎಗ್ಸಾಂ ಡ್ಯೂಟಿನಲ್ಲಿದೀನಿ ಯಾಕೋ ಅಂದೆ. ಬೇಗ ಬಾರೋ, ಪೊಲಿಟಿಕಲ್ ಸೈನ್ಸ್ ಮಲ್ಲಿಕಾರ್ಜುನ ಬಂದಿದಾನೆ ಅಂತಹೇಳಿದಾಗ, ಆಯಿತು ಬರ್ತೀನಿ ಅಂದಿದ್ದೆ. ಆದರೆ ....... ಮಲ್ಲಿಕಾರ್ಜುನ ಅಂದ್ರೆ ಯಾರು ಅಂತ ಗೊತ್ತಾಗಿರಲಿಲ್ಲ. ಅದಕ್ಕಾಗಿಯೇ ಏನೋ ಸ್ವಲ್ಪ ಸೋಮಾರಿತನ ಮಾಡಿ, ಹೋದರಾಯಿತು ಅಂತ ಹೇಳಿ ತಡವಾಗಿ ಅಂದ್ರೆ ಹತ್ಹತ್ರ ಒಂದ್ ಘಂಟೆಯಾಗಿತ್ತು ನಾಬಂದಾಗ. ಅಲ್ಲಿ ಆಶ್ಚರ್ಯ ಅನ್ನೋದು ನನಗಾಗಿ ಕಾದಿತ್ತು ಅನ್ಸತ್ತೆ. ಹೌದು..... ಖಂಡಿತ ಆಶ್ಚರ್ಯ ಆಯ್ತು. ಅದೇನೆಂದರೆ ನಾಕಂಡ ಅದ್ಭುತ ವ್ಯಕ್ತಿಯೊಬ್ಬ ಅಲ್ಲಿ ಕೂತಿದ್ದ. ನನ್ನ ದ್ವ್ಹನಿಯಿಂದಲೇ ವ್ಯಕ್ತಿ ನನ್ನ ಪರಿಚಯ ಕಂಡುಕೊಂಡ. ನನ್ನ ಮುಟ್ಟಲು ಪ್ರಯತ್ನಿಸಿ ತನ್ನ ಕೈಗಳನ್ನ ಮಗುವಿನ ರೀತಿ ಕಡೆ, ಕಡೆಯಲ್ಲಾ ಅಲ್ಲಾಡಿಸಲು ಪ್ರಾರಂಭಿಸಿದ. ಕೊನೆಗೆ ನಾನೇ ಕೈ ಮುಟ್ಟಿ ನಾನಿರುವ ಜಾಗ ತಿಳಿಸಿದೆ. ಅವನು ನನ್ನೆಡೆಗೆ ನೋಡುತ್ತಾ .......? ನಿಷ್ಕಲ್ಮಶ ನಗೆ ನಕ್ಕು ಏನಪ್ಪಾ ಹೇಗಿದ್ದೀಯ? ಎಸ್ಟ್ ವರ್ಷಆಯ್ತು ನಿಮ್ಮನ್ನೆಲ್ಲ ನೋಡಿ ....? ......ಹಾಂ .....ಅಂತೆಲ್ಲ ಏನೇನೋ ಬಡಬಡಿಸಿದ. ಏನಂದ್ರೆ ಇಸ್ಟೋತ್ತಂಕ ಪ್ರಶಾಂತ ಅಂದ್ರೆ ಯಾರು ಅಂತ ಗೊತ್ತಾಗಿರಲಿಲ್ಲ ಕಣೋ. ಇಲ್ಲೇ ಈಗ ನಿನ್ನ ಧ್ವನಿ ಕೇಳಿದ ಮೇಲೆ ಗೊತ್ತಾಗ್ತಾ ಇದೆ ಅಂತ ಅಂದ ನನ್ ಗೆಳೆಯ.
ಹೌದು, ನೀವಂದುಕೊಂಡಿದ್ದು ನಿಜ. ನನ್ನ ಗೆಳೆಯ ಆ ರೀತಿಯಲ್ಲಾ ಆಡಲಿಕ್ಕೆ ಕರಣ ಒಂದೇ. ಅದೇನೆಂದರೆ ಪ್ರಪಂಚದ ದೃಷ್ಟಿಯಲ್ಲಿ ಮತ್ತು ದೈವ ಸೃಷ್ಟಿಯಲ್ಲಿ ಆತ ದೈಹಿಕವಾಗಿ "ಅಂಧ"ನಾಗಿದ್ದಾನೆ. ಅವನಿಗೆ ತನ್ನ ಸ್ನೇಹಿತರನ್ನು ನೋಡಲು ಸಾದ್ಯವಿಲ್ಲ, ಈ ಜಗತ್ತನ್ನು, ಈ ಜಗತ್ತಿನಲ್ಲಿರುವ ಸೌಂದರ್ಯವನ್ನು, ವಿಸ್ಮಯವನ್ನು, ಇಲ್ಲಿನ ಕ್ರೌರ್ಯವನ್ನು, ಮೋಸ ವಂಚನೆಯನ್ನು, ಕೊಲೆ ಸುಲಿಗೆಯನ್ನು ನೋಡಲು ಸಾದ್ಯವಿಲ್ಲ. ಅಂತಹ ವ್ಯಕ್ತಿಯೊಬ್ಬ ನನ್ನ ಗೆಳೆಯ. ಬಹಳ ವರ್ಷಗಳ ನಂತರ ಭೇಟಿಯಾದೆ. ಸರಿಸುಮಾರು ನಾಲ್ಕು ವರ್ಷದ ನಂತರ.
ಇದೆ ನಾಲ್ಕೈದು ವರ್ಷದ ಹಿಂದೆ....................
ನಾನು ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ , ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ದಲ್ಲಿ ಸ್ನಾತಕೋತ್ತರ ಮಾಡುತ್ತಿದ್ದರೆ ನನ್ನ ಗೆಳೆಯ ಅಲ್ಲೇ ರಾಜ್ಯಶಾಸ್ತ್ರ ಅದ್ಯಾಯನ ಮಾಡುತ್ತಿದ್ದ. ಅವನನ್ನು ನೋಡಿದ ದಿನದಿಂದ ನನಗನ್ನಿಸಿದ್ದು ಅವನೊಂದು ಭೂಮಿಮೆಲಿನ ಅದ್ಭುತ ಜೀವಿ ಅಂತ. ಈ ಜಗತ್ತಿನ ಯಾರನ್ನಾದರು ಅವನು ನಿಮಿಷಮಾತ್ರದಲ್ಲಿ ಸೆರೆ ಹಿಡಿಯಬಲ್ಲವನಾಗಿದ್ದ. ನೋಡಿ, ನಮಗೂ ನನ್ನ ಗೆಳೆಯನ ವಿಭಾಗದವರಿಗೂ ಯಾವಾಗಲು ಒಂದು ವಿಷಯದಲ್ಲಿ ಸದಾ ಜಿದ್ದಾ ಜಿದ್ದಿ. ಅದು ವಾಲಿಬಾಲ್ ಆಟದಲ್ಲಿ. ಅವನ ಗೆಳೆಯ ಪ್ರವೀಣ ವಾಲಿಬಾಲ್ನ ಧೈತ್ಯ ಪ್ರತಿಬೆ. ನಮ್ಮದೂ ಒಂಥರಾ ಒಳ್ಳೆ ಟೀಮೆ ಆಗಿತ್ತು. ನಾವಿಬ್ಬರೂ ಯಾವಾಗಲೂ ಅಂತರ ವಿಭಾಗದ ಆಟದಲ್ಲಿ ಮುಖಾಮುಕಿ. ಕಣ್ಣು ಕಾಣದ....? ನನ್ನ ಗೆಳೆಯ ಎಲ್ಲರನ್ನು ಧ್ವನಿಯ ಮೂಲಕ ಇವರೇ ಎಂದು ಗುರುತಿಸುತ್ತಿದ್ದ. ಪಂದ್ಯ ನಡೆಯುತ್ತಿದ್ದರೆ ಸಾಕಸ್ಟು ರೋಷ ಇರುತ್ತಿತ್ತು. ಆ ಸಮಯದಲ್ಲಿ ಈ ಗೆಳೆಯನ ಬಿರುಸು ಮಾತುಗಳು. ಅವನು ಅವನ ಟೀಮ್ಗೆ ಹೇಗೆ ಹುರುಪು ತುಂಬುತ್ತಿದ್ದ ಅಂದ್ರೆ .... ಆಹಾ ಎಂಥಾ ಹೊಡೆತಾ ಹೊಡೆದ್ಯೋ ಪ್ರವೀಣ, ಭೇಷ್ ಕಣೋ. ನೀ ಹುಟ್ಟಿದ್ದು ಸಾರ್ಥಕ ಕಣೋ. ಅಲ್ನೋಡು ಕಾರ್ನರಲ್ಲಿ ಕಾಳಿ (ಕೆಲ ಆತ್ಮೀಯರು ಕರೆಯುವ ನನ್ನ ಹೆಸರದು ) ಇದಾನೆ, ತುಂಬಾ ಎಗರಾಡ್ತಾ ಇದಾನೆ. ಅವನ ತಲೆ ಮೇಲೆ ಹೊಡ್ಯೋ. ಹೀಗೆಲ್ಲ ಹೇಳ್ತಾ ಇದ್ರೆ ಏ ನಿಂಗೆ ಕಣ್ಣು ಕಾಣೋಲ್ಲ ಅಂದ್ರೆ ನಾವು ನಂಬೋಲ್ಲ ಅಂತಿದ್ವಿ. ಇನ್ನು ನನ್ನ ಗೆಳೆಯ ಚೆಸ್ ಆಟದ ದೊರೆ. ಅವನನ್ನ ಗೆದ್ದವರಾರೂ ಅಲ್ಲಿರಲಿಲ್ಲ. ಅಸ್ಟ್ರಮಟ್ಟಿಗೆ ಚೆಸ್ ಸಾಮ್ರಾಜ್ಯದ ರಾಜ ಅವನು. ಹ್ಞಾ... ಮತ್ತೆ ಕೇಳಿ, ಆಗ ಹಾಸ್ಟೆಲ್ನಲ್ಲಿ ಒಂದೇ ಎಸ್ಟಿಡಿ ಬೂತ್. ಅದರಲ್ಲೂ ಮರದ ನೆರಳು ಅದೂ ಇದೂ ಅಂತ ಸ್ವಲ್ಪ ಕತ್ತಲು. ಅದರಲ್ಲಿ ಬಾಗಿಲು ಹಾಕ್ಕೊಂಡು ಮಾತಾಡೋ ಅಭ್ಯಾಸ ಒಳಗೆ ಪೂರ್ತಿ ಕತ್ತಲು. ನಂಬರ್ ಹೊಡಿಲಿಕ್ಕು ಕಷ್ಟ. ಆ ಸಮಯದಲ್ಲಿ ಈ ಗೆಳೆಯನೆ ದಾರಿ 'ದೀಪ' ಇವನು ಫೋನ್ ಮೇಲೆ ಒಂದ್ ಕೈ ಇಟ್ಟು ಬೆರಳುಗಳನ್ನ ಚಲಿಸಿದನೆಂದರೆ ಅದು ಗುರಿ ತಪ್ಪದ ರಾಮನ ಬಾಣ. ನಿಮಗೆ ತಿಳಿದಿರಲಿ ಕಣ್ಣಿರುವ ನಮ್ಮಂತ ಕಮಂಗಿಗಳಿಗೆ ಇವನೇ ಸರ್ವ ಜ್ಯೋತಿ. ಇನ್ನೊಂದು ವಿಷ್ಯ ನೆನಪಿರಲಿ "ನನಗೆ ಕಣ್ಣಿದೆ ನಾ ಎಲ್ಲಿ ಬೇಕಾದರೂ ಜಿಗಿಯಬಲ್ಲೆ ಅಂತ ಬೀಗಿದ ಕುದುರೆಗಳಿಗೆ ಜಿಗಿಯಬೇಕಾದ ಜಾಗದಲ್ಲಿ ಕಣ್ಣು ಕಾಣದಾಗಿತ್ತು. ಅಲ್ಲಿ ನನ್ನ ಗೆಳೆಯ ಬಂಗಾರದ ಪದಕ ಗೆದ್ದ". ಅಂದರೆ ಇವನೇ ಆ ವರ್ಷದ ರ್ಯಾಂಕ್ ಸ್ಟೂಡೆಂಟ್. ಈಗ ಹೇಳಿ ಇವನೊಬ್ಬ ಅದ್ಭುತ ಜೀವಿ ಅಲ್ಲವೇ? ಈ ಅದ್ಭುತ ಜೀವಿ ಯಾರು ಗೊತ್ತಾ? "ಮಲ್ಲಿಕಾರ್ಜುನ ಅಂತ".
ಆಶ್ಚರ್ಯ ಕಣೋ, ೪-೫ ವರ್ಷ ನಾ ನಿನ್ನ ಮಾತಾಡಿಸಿರಲ್ಲಿಲ್ಲ. ಈಗಲೂ ನೀ ನನ್ನ ಧ್ವನಿ ಗುರ್ತಿಸಿದೆಯಲ್ಲ. ಅದು ಹೇಗೋ? ಅಲ್ಲಿ ನಾವೆಲ್ಲ ಮಲ್ಲಿ ಹೋಗೋ, ಬಾರೋ ಅಂತಿದ್ವಿ ಪ್ರೀತಿಯಿಂದ. ಆದರೆ ಇವತ್ತು ಹಾಗನ್ಲಿಕ್ಕೆ ಸಾದ್ಯಾನೆ ಆಗ್ಲಿಲ್ಲ ಕಣೋ. ನೆನಪಿದಿಯ ದಿಡೀರ್ ಅಂತ "ಏನ್ರಿ ಸರ್" ಅಂದೆ. ಎಲ್ಲಾರು"ನೆಟ್ , ಸ್ಲೆಟ್" ಅಂದ್ರೆ ಹೆದರಿ ಕಿಲೋಮೀಟರ್ ದೂರ ಇರುವಾಗ ನೀನು ಅದ್ಯಾವಾಗಲೋ ಎರಡನ್ನೂ ಮುಗಿಸಿ ಪದವಿ ಕಾಲೇಜ್ನಲ್ಲಿ ಲೆಕ್ಚರರ್ ಆಗಿದಿಯಲ್ಲ ನೀನೊಬ್ಬ ನಿಜವಾದ ಸಾದಕ ಕಣೋ. ಅಲ್ಲಾ ಕಣೋ ಇಲ್ಲೇ ಇರುವ ನಿನ್ನಂತಹ ಸಾದಕನ ಬಗ್ಗೆ ಮಾತಾಡೋದು ಬಿಟ್ಟು ದೂರದಲ್ಲಿರೋ ಕಾಣದ, ಕಾಣದವರ ಬಗ್ಗೆ ಹೌದಾ? ಅಬ್ಬಾ? ಅಂತೀವಲ್ಲಾ ನಮಗೇ ನಾವು ಯಾವುದರಲ್ಲಿ ಹೊಡ್ಕೊಬೇಕು ಹೇಳು.ನಿನ್ನ ಇಂಗ್ಲಿಷ ಪದಗಳು, ಆ ಹುಡುಗಾಟಿಕೆಯ ಮಾತುಗಳು, ಹಳೆಯ ನೆನಪುಗಳು ವಾ.... ಹ್ . ನಿನ್ನ ಜೋತೆಗಿದ್ರೆ ನಾವು ಪ್ರಪಂಚ ಗೆಲ್ಲಬಹುದೇನೋ? ಅನ್ಸತ್ತೆ. ಏನಂದೆ .....? ನಿಮಗೆಲ್ಲ ಅನ್ಸೋದ್ ಅಸ್ಟೇ. ಗೆಲ್ಲೋಕ್ಕಾಗಲ್ಲ ಅಂದ್ಯಾ?. ಗೆಲ್ಲೋದು ನಿನ್ನನ್ತೋನು ಮಾತ್ರ ಅಂದ್ಯ?. ಹೌದು ನೂರಕ್ಕೆ ನೂರರಸ್ಟ್ ಸತ್ಯ ಕಣೋ ನಿನ್ ಮಾತು.
ಹಾಗೆ ಮಾತಾಡ್ತಾ ಮಾತಾಡ್ತಾ ಊಟಕ್ಕೆ ಹೋದ್ರೆ ಏನು ನೀಟಾಗಿ ಊಟ ಮಾಡಿದ್ಯೋ ನೀನು. ಸ್ವಲ್ಪವೂ ಅನ್ನ ಚೆಲ್ಲಲಿಲ್ಲ ಕೆಳಗೆ. ಜೊತೆಗೆ ಬೇಳೆ ಬೆಂದಿಲ್ಲ ಅಂತ ಸರಿಯಾಗಿ ಹೇಳಿದ್ಯಲ್ಲ ಅದು ಹೇಗೋ ಗೆಳೆಯ. ನಿನ್ನ ಕಲ್ಪನೇಲಿ ಬೇಳೆ ಹೇಗಿರತ್ತೆ? ಹೌದು ನೀನು ನನ್ನನ್ನ ಯಾವ ರೀತಿ ಕಲ್ಪಿಸಿಕೊಂಡಿದಿಯ? ಜಗತ್ತು, ಪರಿಸರನ್ನೆಲ್ಲ ನಿನ್ನ ಸ್ಮೃತಿ ಪಟಲದಲ್ಲಿ ಯಾವ ರೀತಿಯಲ್ಲಿ ಊಹಿಸಿಕೊಂಡಿದಿಯ? ಸ್ವಲ್ಪ ಹೇಳ್ತಿಯ. ಅಲ್ಲ ಕಣೋ ನಾವೆಲ್ಲ ಅದು ಬೇಕು ಇದು ಬೇಕು ಅಂತ ಕಂಡಿದ್ದರ ಹಿಂದೆಲ್ಲ ಓಡ್ತಿವಿ. ಆದ್ರೆ ನಮಗದೆಲ್ಲ ಎಸ್ಟೋ ಸಾರಿ ಬರೀ ಮರೀಚಿಕೆ ಅಸ್ಟೆ. ನೀನ್ ಏನನ್ನೂ ಕಾಣಲ್ಲ ......? ಆದರೂ ಎಂಥೆನ್ಥವೆಲ್ಲ ನಿನ್ನ ಕಾಲಡಿ ಬಿದ್ದಿವೆ. ನಂಗೊತ್ತು ಕಣೋ ಇದಕ್ಕೆಲ್ಲ ಕಾರಣ ನಿನ್ನ ಸಾಮರ್ಥ್ಯ, ಶ್ರಮ ಅಂತ. ಗೆಳೆಯ ಇನ್ನೊಂದ್ ವಿಷ್ಯ ಹೇಳಲಾ? ಅವತ್ತು ನೀ ನಮ್ಮ ಕಾಲೇಜಿನ ಮೆಟ್ಟಿಲುಗಳನ್ನ ಹತ್ತುವಾಗ ಅಕ್ಷರಶಃ ನಾನು ಭಯಪಟ್ಟೆ. ಕಾರಣ ಎಲ್ಲಿ ಎಡವಿ ಬೀಳುತ್ತಿಯೋ ಅಂತ ಸದಾ ನಿನ್ನ ಪಾದದ ಕಡೆಗೇ ನೋಡುತ್ತಿದ್ದೆ. ನೀ ಎಲ್ಲೂ ಎಡವಲೂ ಇಲ್ಲ ಬೀಳಲೂ ಇಲ್ಲ. ಬದಲಾಗಿ ಜೋರಾಗಿ ಗಹಗಹಿಸಿ ನಗುತ್ತಾ, .. ಮೂರ್ಖ ಸರಿಯಾಗಿ ದಾರಿ ನೋಡ್ತಾ ನಡಿಯೋ ಬಿದ್ದೀಯ? ಅಂತ ಹೇಳ್ತಿದಿಯೇನೋ ಅನ್ನಿಸ್ತು. ಹೌದು ಕಣೋ ನಿನ್ನ ಅನಿಸಿಕೆ ನಿಜ. ನೀನೀ ಜಗತ್ತಿಗೆ ನನಗಿಂತಲೂ ಮೊದಲು ಬಂದವನು. ಎಲ್ಲೋ ಯಾವತ್ತೋ ಒಂದು ದಿನ ಸಿಕ್ಕಾಗ ದೇವು ಹೇಳಿದ್ದನಂತೆ, ನಮ್ಮ ಕಾಲೇಜ್ ಹೆಸರು ದಯಾನಂದ ಸಾಗರ್ ಅಂತ. ಕುಮಾರಸ್ವಾಮಿ ಲೇಔಟ್, ಬನಶಂಕರಿ ಹತ್ರ ಇದೆ ಅಂತ. ಇಸ್ಟ್ಅನ್ನೇ ಹೇಳಿದ್ದಂತೆ. ಅಸ್ಟೇ ಮಾಹಿತಿ ಇಟ್ಟುಕೊಂಡು ಹುಡುಕುತ್ತಾ ಹುಡುಕುತ್ತಾ ..... ಅಲ್ಲಲ್ಲಾ ಸಲೀಸಾಗಿ ಬಂದಿದಿಯಲ್ಲ ನೀನು ನಿಜವಾಗಿ ಅಂಧ......? ಹೌದಾ?. ಆಮೇಲೆ ಕೆ ಆರ್ ರೋಡ್ ಇನ್ನೂ ಚಿಕ್ಕದಾಗೇ ಇದೆ ಅಂತ ಮಾತಿನ ಮದ್ಯೆ ಅಂದ್ಯಲ್ಲ ನೀನು ನಿಜವಾಗಿ...? ಇಂಥ ಮಹಾ ನಗರದಲ್ಲಿ ನೀನೊಬ್ಬನೇ ನಿರ್ಭಯವಾಗಿ ಓಡಾಡ್ತಿಯಲ್ಲ ಗೆಳೆಯ ನೀನು ನಿಜವಾಗಿ ...?
ಏ ಗೆಳೆಯ ನಾ ನಿನಗೆ ಇಲ್ಲಿ ಪದೇ ಪದೇ ಅಂಧ ಅಂದೆ ಅಂತ ಅನ್ಯತಾ ಭಾವಿಸಬೇಡ ಕಣೋ.ನೀ ನಿಜವಾಗಿ ಅಂಧ ಅಲ್ಲ ಕಣೋ. ಅಸ್ಟ್ ನೀಟಾಗಿ ಬಟ್ಟೆ ಹಾಕ್ಕೊಂಡ್ ಇನ್ಶರ್ಟ್ ಮಾಡಿ, ಸ್ವಚ್ಚವಾಗಿ, ಕಣ್ಣಿಗೆ ಗ್ಲಾಸ್ ಹಾಕ್ಕೊಂಡ್ ಸುಂದರವಾಗಿರೋ ನೀನು ಅಂಧನ ಮುಖವಾಡ ಹಾಕ್ಕೊಂಡು ಭೂಮಿಗೆ ಬಂದಿರೋ ಗಂಧರ್ವ ಕಣೋ. ನಿಜವಾಗಿಯೂ ನೀ ಗಂಧರ್ವ ಕಣೋ.

3 ಕಾಮೆಂಟ್‌ಗಳು:

  1. this is good momuent for all life.it is crazy moment...so u have to write more recent events..

    ಪ್ರತ್ಯುತ್ತರಅಳಿಸಿ
  2. ಪ್ರಶಾಂತ್ ಸರ್,

    ಮಲ್ಲಿಕಾರ್ಜುನ ರಂಥ ಗೆಳೆಯನ ಬೇಟಿ. ಮೊದಲ ಬರಹ ಕುತೂಹಲಕರವಾಗಿದೆ. ಮತ್ತು ಲೇಖನದಲ್ಲಿ ಬೇರೇನೋ ಇದೆ ಅನ್ನಿಸುತ್ತೆ....ಮುಂದಿನದನ್ನು ಕಾಯುತ್ತೇನೆ..
    ಅಂದಹಾಗೆ ನಾನು ಶಿವು ಅಂತ. ರಂಜನ ಬ್ಲಾಗಿಂದ ನಿಮ್ಮ ಬ್ಲಾಗಿಗೆ ಬಂದೆ. ಬಿಡುವಾದಾಗ ನನ್ನ ಬ್ಲಾಗ್ ಛಾಯಾಕನ್ನಡಿಗೆ ಬೇಟಿಕೊಡಿ..

    http://chaayakannadi.blogspot.com/

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  3. ಪ್ರೀತಿಯ ಶಿವುಅವ್ರೆ........
    ಮೊದಲಿಗೆ ನಿಮಗೆ ಧನ್ಯವಾದಗಳು. ನನ್ನ ಬರಹ ಓದಿದ್ದಕ್ಕೆ. ಹೌದು ನಿಮ್ಮ ಅನಿಸಿಕೆ ನಿಜ. ಆ ಗೆಳೆಯನ ಕಥೆ ಇನ್ನೂ ಇದೆ. ಬರೆಯುತ್ತೇನೆ ತಪ್ಪದೆ ಓದಿ. ನಿಮ್ಮ ಬ್ಲಾಗ್ ನೋಡಿದೆ. ಚನ್ನಾಗಿದೆ ಮತ್ತೆ ಮತ್ತೆ ನಿಮ್ಮ ಬ್ಲಾಗ್ ನಲ್ಲಿ ನನ್ನ ಪಯಣವಿರುತ್ತದೆ.

    ಪ್ರತ್ಯುತ್ತರಅಳಿಸಿ