ಮಂಗಳವಾರ, ಜುಲೈ 28, 2009

ಸ್ನೇಹ ಅಂದರೆ.......

ಮನಸು ಮೌನವಾದಾಗ
ಮಾತು ಬಾರದಾದಾಗ
ಮಾನ ಹೋಗುವಂತಿರುವಾಗ
ಸಿಗುವ ಮುತ್ತಿನಂಥ ಮಾತೇ ಸ್ನೇಹ.

ಗೆದ್ದಾಗ ಗಮನಿಸುವ
ಸೋತಾಗ ಸಂತೈಸುವ
ಸತ್ತಾಗ ಸ್ಮರಿಸುವ
ಆ ಜೀವದ ಹೃದಯವೇ ಸ್ನೇಹ.

ಭಾವನೆಯಲ್ಲಿನ ಭವ್ಯತೆಯನ್ನ
ಕಣ್ಣುಗಳಲ್ಲಿನ ಕನಸುಗಳನ್ನ
ಕನಸುಗಳಲ್ಲಿನ ಕವನಗಳನ್ನ
ಬರೆಯಲು ಸಿಗುವ ಸ್ಪೂರ್ತಿಯೇ ಸ್ನೇಹ.

ಸಾಧನೆ ಮಾಡಲು ಸೇತುವೆಯನ್ನ
ಸಮಸ್ಯೆ ಬಂದಾಗ ಸಹಕಾರವನ್ನ
ಸಿಟ್ಟು ಬಂದಾಗ ಸಂಯಮವನ್ನ
ತೋರಿಸುವ ಕೈಗಳೇ ಸ್ನೇಹ.

ಸುಮ್ ಸುಮ್ನೆ ಸಡಿಲವಾಗದ
ಚಂಗ್ ಚಂಗನೆ ಬಂದು ಹೋಗದ
ನಿಶ್ಚಲವಾದ, ಅಚಲವಾದ, ಶುಭ್ರವಾದ
ಈ ನಮ್ಮ ಬಾಂಧವ್ಯವೇ ಸ್ನೇಹ.

ಮನದ ಗೆಳತಿ

ನೀ ಇಬ್ಬನಿಯಾದರೆ
ನಾ ಗರಿಕೆಯಾಗುವೆ ಗೆಳತಿ
ಸದಾ ಶೋಭಿಸುತ್ತಿರು ನನ್ನ ಶಿರದ ಮೇಲೆ.

ನೀ ತಾರೆಯಾದರೆ
ನಾ ಬಾನಾಗುವೆ ಗೆಳತಿ
ಸದಾ ಮಿನುಗುತ್ತಿರು ನನ್ನಲ್ಲೇ.

ನೀ ಚುಕ್ಕೆಯಾದರೆ
ನಾ ಜಿಂಕೆಯಾಗುವೆ ಗೆಳತಿ
ಸದಾ ಮಿಂಚುತ್ತಿರು ನನ್ನ ಮೈಮೇಲೆ.

ನೀ ತಾವರೆಯಾದರೆ
ನಾ ತೊರೆಯಾಗುವೆ ಗೆಳತಿ
ಸದಾ ಅರಳಿ ನಿಂತಿರು ನನ್ನ ಎದೆ ಮೇಲೆ

ನೀ ಮೀನಾದರೆ
ನಾ ಸಾಗರವಾಗುವೆ ಗೆಳತಿ
ಸದಾ ನೀ ಆಡುತ್ತಿರು ನನ್ನ ಒಡಲಲ್ಲೇ

ಅನಾಹುತಗಳ ಸರಮಾಲೆ

ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.

ಮಾನವನ ಸುತ್ತ ಅನಾಹುತಗಳ ಸರಮಾಲೆ
ಆದರೂ ಪ್ರಪಂಚವ ನೋಡುವನು ಕಾಮಾಲೆ ಕಣ್ಣಲ್ಲೇ
ಮಾಡುವುದೆಲ್ಲ ದೂರದೃಷ್ಟಿಯಿಂದಲೇ
ಆದರೆ ಆಗುವುದೆಲ್ಲ ದುರಾದ್ರುಸ್ಟದಲ್ಲೇ

ಮಾನವ ಹಾರಾಡುವುದು ವಿಮಾನದಲ್ಲೇ
ಆಗ ಹೇಳುತ್ತಾನೆ ಸ್ವರ್ಗ ಇಲ್ಲೇ ಮೇಲೆ
ಅನಾಹುತವಾದಾಗ ಮದ್ಯದಲ್ಲೇ
ಅವನ ಸಾವು ವಿಮಾನ ಬಿದ್ದ ಸ್ತಳದಲ್ಲೇ.

ಮಾನವನ ಜೀವನ ಸಾಗುವುದು ಬೆಳಕಲ್ಲೇ
ಅದಕ್ಕಾಗಿ ಹರಡಿರುವನು ತಂತಿಯ ಮಾಲೆ
ವಿದುತ್ ಎನ್ನುವ ಮಿಂಚು ಅದರ ಮೇಲೆ
ಕೊಂಚ ಎಚ್ಚರ ತಪ್ಪಿದರೆ ಸಾವು ಕ್ಷಣದಲ್ಲೇ

ಮಾನವ ಈಗ ತಿರುಗಾಡುವುದೆಲ್ಲಕಾರಲ್ಲೇ
ಅದೂ ಘಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲೇ
ಅಪ್ಪಿತಪ್ಪಿ ಕಣ್ಣು ಮುಚ್ಚಿದರೆ ತೂಕಡಿಕೆಯಲ್ಲಿ
ಮತ್ತೆ ಕಣ್ಣು ತೆರೆಯುವುದು ಪರಲೋಕದಲ್ಲೇ.

ಮಾನವನು ಆಹಾರ ಬೆಳೆಯುವುದು ಕಲ್ಮಶದಲ್ಲೇ
ಹೀಗಾಗಿ ಅವನ ಹೊಟ್ಟೆಯೂ ತುಂಬಿರುವುದು ವಿಷದಲ್ಲೇ
ಆದ್ದರಿಂದ ವರ್ಷವಿಡೀ ನರಳುವನು ರೋಗದಲ್ಲೇ
ಅದು ಕೊನೆಯಾಗುವುದು ಆತನ ಸಾವಿನಲ್ಲೆ.

ಮಾನವನ ಸುತ್ತ ಮುತ್ತ ಅನಾಹುತಗಳ ಸರಮಾಲೆ
ಗೊತ್ತಿದ್ದೂ ಗೊತ್ತಿಲ್ಲದೆಯೋ ಬದುಕುತ್ತಿದ್ದಾನೆ ಆ ಹುತ್ತದಲ್ಲೇ.



ಏಕೆ ಹೀಗೆ?

ಮನಸ್ಸಿಗೆ ಬೇಜಾರಾಗಿದೆ
ಹೃದಯ ಭಾರವಾಗಿದೆ
ದೇಹ ನಿಶ್ಚಲವೆನಿಸಿದೆ
ದುಃಖ ಉಮ್ಮಳಿಸುತ್ತಿದೆ
ಏಕೆ ಹೀಗೆ?

ಕಣ್ಣು ಕಾಣದಾಗಿದೆ
ಕಿವಿ ಕೇಳದಾಗಿದೆ
ಕೈ ಆಡದಾಗಿದೆ
ಕಾಲು ನಡುಗುತಲಿದೆ
ಏಕೆ ಹೀಗೆ?

ಊಟ ಸೇರದಾಗಿದೆ
ನೀರು ಬೇಡವಾಗಿದೆ
ಬಾಯಿ ಒಣಗಿ ಹೋಗಿದೆ
ನಾಲಿಗೆ ಸಪ್ಪೆಯಾಗಿದೆ
ಏಕೆ ಹೀಗೆ?

ನೆನಪು ಕಹಿಯಾಗಿದೆ
ಮಾತೆ ಬಾರದಾಗಿದೆ
ಪ್ರೀತಿ ಇಲ್ಲದಾಗಿದೆ
ಜೀವನ ಬೇಡವಾಗಿದೆ
ಏಕೆ ಹೀಗೆ?

ಜೀವನವೆಂದರೆ ಇದೇನಾ?
ಇದು ಜೀವನದ ಭಾಗ ಮಾತ್ರಾನಾ?
ಇದು ಒಂದೆರಡು ಗಳಿಗೆ ಮಾತ್ರಾನಾ?
ಜೀವನಪೂರ್ತಿ ಇದೇನಾ?
ಬದಲಾಗುವುದು ಹೇಗೆ?

ಶಿವರಾತ್ರಿಯ ಸುಂದರಿ

ಶಿವರಾತ್ರಿಯ ದಿನದಂದು
ನೀ ಬಂದೆ ಪೂಜೆಗೆಂದು
ಹೂ, ಹಣ್ಣು, ಕಾಯಿ ಹಿಡಿದು
ನಿಂತಿದ್ದೆ ನೀ ಕೈ ಮುಗಿದು.

ಪೂಜೆ ಮಾಡುವ ಸಲುವಾಗಿ
ನನ್ನ ನೀ ಕರೆದೆ ಮೆಲುವಾಗಿ
ನಿನ್ನಂದಕ್ಕೆ ನಾ ಮರುಳಾಗಿ
ಪೂಜೆ ಮಾಡಿದೆ ಪೂಜಾರಿಯಾಗಿ.

ನಿನ್ನ ನೋಡಿದ ಆ ಹೊತ್ತು
ನನ್ನ ಹೃದಯ ಹಾರಿಹೋಯ್ತು
ನಿನಗಾಗಿ ಹಂಬಲಿಸುತ್ತ
ಹುಡುಕಾಡಿದೆ ಸುತ್ತಾ ಮುತ್ತಾ .

ನೀ ಅಲ್ಲೇ ಪಕ್ಕದಲ್ಲೇ ನಿಂತಿದ್ದೆ
ನಾ ನಿನ್ನೆ ಗಮನಿಸುತಿದ್ದೆ
ನೀ ನನ್ನ ಮನಗೆದ್ದೆ, ಹೃದಯ ಕದ್ದೆ
ನಾ ನಿನ್ನ ಪ್ರೀತಿಯ ಬಲೆಗೆ ಬಿದ್ದೆ.

ಆಮೇಲೆರಡು ಬಾರಿ ಆಯಿತು
ನಮ್ಮಿಬ್ಬರ ಭೇಟಿ
ನಾಚಿಕೆಯ ದಾಟಿ, ಭಾವನೆಗಳ ಮೀಟಿ
ಸೇರಿಸಿದೆವು ನಾವಿಬ್ಬರೂ ತುಟಿಗೆ ತುಟಿ.

ಆಮೇಲೆಏನಾಯ್ತೆ ನಮಗೆ ಗೆಳತಿ
ಹೃದಯದಲ್ಲೈತೆ ಈ ಪ್ರೀತಿ
ಅದಕ್ಕಡ್ಡಿ ನಮ್ಮಿಬ್ಬರ ಜೀವನ ರೀತಿ
ಸುದಾರಿಸಲಿ ಈ ರೀತಿ ನೀತಿ.

ನನಗಾಗಿ ನೀ ಬರುವೆ
ಅಂತಾ ನಾ ಕಾದಿರುವೆ
ನನ್ನ ಹೃದಯ ನೀನಾಗಿರುವೆ
ನಿನಗಾಗಿ ನಾ ಕಾದಿರುವೆ.

ನನ್ನ ಪ್ರೀತಿಯ ಹುಡುಗಿಗೆ

ನನ್ನ ಪ್ರೀತಿಯ ಹುಡುಗಿಗೆ
ಈ ನನ್ನ ಕವನದ ಕೊಡುಗೆ
ಇದರಲ್ಲಿ ಬರೆದಿದ್ದೇನೆ ನಿನಗೆ
ನಾನು ನಿನ್ನ ಪ್ರೀತಿಸುವ ಬಗೆ.

ಆಕಾಶವನ್ನೇ ನಿನ್ನ ಅಂಗೈಯಲ್ಲಿರಿಸುವೆ
ಆ ಸಾಗರವನ್ನೇ ನಿನ್ನ ಕೈ ಸೆರೆಯಾಗಿಸುವೆ
ತಾರೆಯನ್ನೇ ತಂದು ಹಣೆಮೆಲಿಡುವೆ
ಸುಂದರ ಜಲಪಾತವನ್ನೇ ನಿನ್ನ ಜಡೆಯಾಗಿಸುವೆ.

ಅರಳುವ ಮೊದಲ ಹೂವು ನಿನಗಾಗಿ
ಬೀಳುವ ಮೊದಲ ಮಂಜು ನಿನಗಾಗಿ
ನನ್ನದೆನ್ನುವ ವಸ್ತುವೆಲ್ಲ ನಿನಗಾಗಿ.

ನಿನಗಾಗಿ ಕಟ್ಟಿಸುವೆ ಸುಂದರ ಅರಮನೆ
ಅಲ್ಲಿನ ಸಿಂಹಾಸನಕ್ಕೆ ಹಾಕಿಸುವೆ ಚಿನ್ನವನ್ನೇ
ಅದರಲ್ಲಿ ಕೂರಿಸುವೆ ನಾ ನಿನ್ನನ್ನೇ
ಇದೆಲ್ಲ ನಿನಗಾಗಿ ಓ ನನ್ನ ಮನದೆನ್ನೆ.

ಪ್ರಿಯೆ, ನಿನಗಿದು ಬದುಕಲು ಬೇಕಿಲ್ಲ
ಇದು ಅನಿವಾರ್ಯವೂ ಅಲ್ಲ
ಇದನ್ನೆಲ್ಲಾ ನಾ ನಿನಗೆ ಕೊಡಿಸುವುದಿಲ್ಲ
ಅದು ನನ್ನಿಂದ ಸಾಧ್ಯವೂ ಇಲ್ಲ.

ಆಸೆಯೆಂಬ ಕನಸು ಬೇಕೇ?
ಪ್ರೀತಿಸುವ ಮನಸು ಸಾಕೆ
ಜಗಮಗಿಸುವ ಅರಮನೆ ಬೇಕೆ?
ಹೃದಯವೆಂಬ ಗುಡಿಸಲಲ್ಲೇ ಜಾಗ ಸಾಕೆ.

ನನ್ನ ವಿಶಾಲವಾದ ಹೃದಯದಲ್ಲಿ
ನಿನ್ನ ನೆನಪು ಸದಾ ಇರಲಿ
ಅದರ ಒಂದೊಂದು ಬಡಿತದಲ್ಲಿ
ನಿನ್ನ ಹೆಸರು ಹಾಡಾಗಿ ಬರಲಿ

ಓ ನನ್ನ ಮುದ್ದಿನ ಗೆಳತಿ
ಈ ಹೃದಯಕ್ಕೆ ನೀನೆ ಒಡತಿ
ಇದಕ್ಕಿದ್ದರೆ ಸಮ್ಮತಿ
ನೀನಾಗುವೆ ನನ್ನ ಶ್ರೀಮತಿ.